ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಪರಸ್ಪರ ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದ ಪ್ರೇಮಿಗಳ ಜೀವನದಲ್ಲಿ ಪೋಷಕರು ದೊಡ್ಡ ಮಟ್ಟದ ಅಡ್ಡಿ ಉಂಟುಮಾಡಿರುವ ಗಂಭೀರ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಸೂರು ಗ್ರಾಮದ ನಿವಾಸಿಯಾದ 26 ವರ್ಷದ ನವೀನ್ ಹಾಗೂ 19 ವರ್ಷದ ರಮ್ಯ ಎಂಬುವರು ಕಳೆದ 5 ವರ್ಷಗಳಿಂದ ಗಾಢವಾಗಿ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಭಿನ್ನ ಜಾತಿಗಳಿಗೆ ಸೇರಿದ್ದರಿಂದ ಇತ್ತೀಚೆಗೆ ತಮ್ಮಿಷ್ಟದಂತೆ ಅಂತರ್ಜಾತಿ ವಿವಾಹವಾಗಿದ್ದರು. ಆದರೆ ಈ ವಿವಾಹವನ್ನು ಒಪ್ಪದ ಯುವತಿಯ ಪೋಷಕರು, ಮದುವೆಯಾದ ನಂತರವೂ ಯುವತಿಯನ್ನು ಬಲವಂತವಾಗಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ತಾನು ಕಾನೂನುಬದ್ಧವಾಗಿ ಮದುವೆಯಾಗಿರುವ ಪತ್ನಿಯನ್ನು ಪೋಷಕರು ಕೂಡಿಹಾಕಿದ್ದಾರೆ ಎಂದು ಆರೋಪಿಸಿರುವ ಯುವಕ, ಈಗ ತನ್ನ ಪತ್ನಿಗಾಗಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಸುತ್ತಲೂ ನಿರಂತರವಾಗಿ ಅಲೆದಾಡುತ್ತಿದ್ದಾನೆ.
ತನ್ನ ಪ್ರೀತಿಯ ಪತ್ನಿಯನ್ನು ವಾಪಸ್ ಕೊಡಿಸುವಂತೆ ಕೋರಿ ನವೀನ್ ಗೌರಿಬಿದನೂರು ಗ್ರಾಮಾಂತರ ಠಾಣೆ ಮೆಟ್ಟಿಲೇರಿದ್ದರೂ ಪೊಲೀಸರು ಮಾತ್ರ ಕಳೆದ 1 ತಿಂಗಳಿಂದ ಯುವತಿಯನ್ನು ಕರೆಸಿಕೊಡುವುದಾಗಿ ಕೇವಲ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ನೊಂದ ಯುವಕ ಆಕ್ರೋಶ ವ್ಯಕ್ತಪಡಿಸಿದ್ದಾನೆ. ತಾವು ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ದೂರನ್ನು ನೀಡಲು ಮುಂದಾದರೆ, ಪೊಲೀಸರು ಮತ್ತು ಯುವತಿಯ ಕಡೆಯವರು ಸೇರಿಕೊಂಡು ಉಲ್ಟಾ ತನ್ನ ಮೇಲೆಯೇ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ ಎಂದು ಯುವಕ ದೂರಿದ್ದಾನೆ. ಯುವತಿಯ ಪೋಷಕರು ಆಂಧ್ರಪ್ರದೇಶದ ಹಿಂದುಪುರ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಅಪಹರಣದ ಸುಳ್ಳು ಪ್ರಕರಣವನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಇದಲ್ಲದೆ ಯುವತಿಯ ಪೋಷಕರು ಯುವಕನಿಗೆ ನೀವು ಎಲ್ಲೇ ಇದ್ದರೂ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಸಹ ಹಾಕುತ್ತಿದ್ದಾರೆ ಎನ್ನಲಾಗಿದೆ.
ತನ್ನ ಪತ್ನಿಯ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ, ಆಕೆಗೆ ಆರೋಗ್ಯ ತುಂಬಾ ಸೀರಿಯಸ್ ಆಗಿದೆ ಮತ್ತು ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನುವ ಸುಳ್ಳು ನೆಪಗಳನ್ನು ಹೇಳಿ ಪೊಲೀಸರು ದಿನ ತಳ್ಳುತ್ತಿದ್ದಾರೆ ಎಂದು ನವೀನ್ ಅಳಲು ತೋಡಿಕೊಂಡಿದ್ದಾನೆ. ಕಳೆದ 1 ತಿಂಗಳಿಂದ ಪ್ರತಿದಿನ ಪೊಲೀಸ್ ಠಾಣೆಗೆ ಅಲೆದಾಡಿ ಬೇಸತ್ತಿರುವ ಪ್ರಿಯಕರ, ಒಂದು ವೇಳೆ ತನಗೆ ತನ್ನ ಪ್ರೇಯಸಿ ಹಾಗೂ ಪತ್ನಿ ಸಿಗದಿದ್ದರೆ ನೇರವಾಗಿ ಪೊಲೀಸ್ ಠಾಣೆಯ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತೀವ್ರ ಆಕ್ರೋಶ ಮತ್ತು ಎಚ್ಚರಿಕೆಯನ್ನು ನೀಡಿದ್ದಾನೆ. ಪ್ರೀತಿಸಿ ಮದುವೆಯಾದ ನವಜೋಡಿಗೆ ರಕ್ಷಣೆ ನೀಡಬೇಕಾದ ಕಾನೂನು ವ್ಯವಸ್ಥೆಯೇ ತನಗೆ ಅನ್ಯಾಯ ಮಾಡುತ್ತಿದೆ ಎಂದು ನೊಂದ ಯುವಕ ಕಣ್ಣೀರು ಹಾಕುತ್ತಿದ್ದಾನೆ.