ಬಸ್‌ನಲ್ಲಿ ಕಡಲೆಕಾಯಿ ತಿಂದಿದ್ದೇ ತಪ್ಪಾಯ್ತಾ? ಕೊಳ್ಳೇಗಾಲದಲ್ಲಿ ಕಂಡಕ್ಟರ್‌ಗೆ ಧರ್ಮದೇಟು ಕೊಟ್ಟ ಪ್ರಯಾಣಿಕರು!

Is it wrong to eat peanuts on the bus

ಕೊಳ್ಳೇಗಾಲ: ಕ್ಷುಲ್ಲಕ ಎನ್ನಬಹುದಾದ ಕಡಲೆಕಾಯಿ ಸಿಪ್ಪೆ ವಿಚಾರವೊಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರಣರಂಗ ಸೃಷ್ಟಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸರಗೂರು ಬಳಿ ನಡೆದಿದೆ. ಸ್ವಚ್ಛತೆ ವಿಚಾರವಾಗಿ ಶುರುವಾದ ಮಾತಿನ ಚಕಮಕಿ ಅಂತಿಮವಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

ನಡೆದಿದ್ದೇನು : ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರು ಕಡಲೆಕಾಯಿ ತಿಂದು ಅದರ ಸಿಪ್ಪೆಯನ್ನು ಬಸ್‌ನೊಳಗೆ ಎಲ್ಲೆಂದರಲ್ಲಿ ಬಿಸಾಡಿದ್ದರು. ಇದನ್ನು ಗಮನಿಸಿದ ಬಸ್ ನಿರ್ವಾಹಕ (ಕಂಡಕ್ಟರ್) ಮುನಿಮಾದಯ್ಯ ಅವರು ಪ್ರಯಾಣಿಕರನ್ನು ಪ್ರಶ್ನಿಸಿದ್ದಾರೆ. “ಬಸ್‌ನಲ್ಲಿ ಕಸ ಹಾಕಬೇಡಿ” ಎಂದು ಹೇಳಿದ ವಿಚಾರವಾಗಿ ಪ್ರಯಾಣಿಕರು ಮತ್ತು ನಿರ್ವಾಹಕನ ನಡುವೆ ಮಾತಿಗೆ ಮಾತು ಬೆಳೆದಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ರಸ್ತೆಯಲ್ಲೇ ಮಾರಾಮಾರಿ: ಸರಗೂರು ಬೈಪಾಸ್ ಬಳಿ ಬಸ್ ಬರುತ್ತಿದ್ದಂತೆ ಗಲಾಟೆ ವಿಕೋಪಕ್ಕೆ ಹೋಗಿದೆ. ಚಾಮರಾಜನಗರ ಮೂಲದ ಪ್ರಯಾಣಿಕರಾದ ಫಯಾಜ್ ಅಹ್ಮದ್ ಮತ್ತು ಶಾರಾನ್ ಎಂಬುವವರು ನಿರ್ವಾಹಕ ಮುನಿಮಾದಯ್ಯ ಅವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪ್ರತಿಯಾಗಿ ನಿರ್ವಾಹಕ ಕೂಡ ಪ್ರತಿರೋಧ ಒಡ್ಡಿದ್ದು, ಇಬ್ಬರ ನಡುವೆ ಭೀಕರ ಬಡಿದಾಟ ನಡೆದಿದೆ.

ಆಸ್ಪತ್ರೆಗೆ ದಾಖಲು: ಈ ಗಲಾಟೆಯಲ್ಲಿ ನಿರ್ವಾಹಕ ಮುನಿಮಾದಯ್ಯ ಹಾಗೂ ಪ್ರಯಾಣಿಕರಾದ ಫಯಾಜ್ ಮತ್ತು ಶಾರಾನ್ ಮೂವರಿಗೂ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಕೊಳ್ಳೇಗಾಲ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೊಳ್ಳೇಗಾಲ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಸಾರ್ವಜನಿಕ ಸಾರಿಗೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಹೇಳಿದ್ದಕ್ಕೆ ಹಲ್ಲೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

RECENT NEWS