ಬೆಳಗಾವಿ : ಚುನಾವಣಾ ಆಯೋಗ ನಡೆಸುವ ಎಸ್ ಐ ಆರ್ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ರಾಜಕೀಯ ಮಾಡುವುದಿಲ್ಲ. ಆದರೆ ನಿಜವಾದ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದೆಂಬುದಷ್ಟೇ ನಮ್ಮ ಕಾಳಜಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇದನ್ನು ಮಿಸ್ ಮಾಡದೇ ಓದಿ : ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ನವದೆಹಲಿಗೆ ಆಗಮನ
ಇದನ್ನು ಮಿಸ್ ಮಾಡದೇ ಓದಿ : ಪಿ.ಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರ ಸರ್ಕಾರದ ರೈತರ ಗುರುತಿನ ಚೀಟಿ ಕಡ್ಡಾಯ
ಅವರು ಇಂದು ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಚುನಾವಣಾ ಆಯೋಗ ನಡೆಸುವ ಎಸ್ ಐ ಆರ್ ಪ್ರಕ್ರಿಯೆಯಂತೆ ರಾಜ್ಯದ 3 ಕೋಟಿ ಮತದಾರರು ಮ್ಯಾಪ್ ಆಗಿಲ್ಲವೆಂದು ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಎಸ್ ಐ ಆರ್ ಪ್ರಕ್ರಿಯೆ ಎಚ್ಚರಿಕೆಯಿಂದ ನಡೆಯಬೇಕಿದ್ದು, ಯಾವುದೇ ಮತದಾರರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಬೇಎಂದು ಬಿಎಲ್ ಓ ಗಳಿಗೆ ಸೂಚಿಸಲಾಗಿದೆ ಎಂದರು.

ವಿಚಾರಣೆ ನಡೆಸಿ ಶಿಸ್ತಿನ ಕ್ರಮ : ಡಿಜಿಪಿ ರಾಮಚಂದ್ರರಾವ್ ಅವರ ಮಹಿಳೆಯರೊಂದಿನ ಅನುಚಿತ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ಡಿಜಿಪಿಯವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಉನ್ನತಮಟ್ಟದ ಅಧಿಕಾರಿಯೂ ಕಾನೂನಿಗಿಂತ ದೊಡ್ಡವರಲ್ಲ ಎಂದರು.
ವಿರೋಧಪಕ್ಷಗಳು ಸುಳ್ಳು ಆರೋಪಗಳಿಂದ ಜನರ ದಾರಿ ತಪ್ಪಿಸುತ್ತಿದ್ದಾರೆ : ಶಾಸಕ ಜನಾರ್ಧನ ರೆಡ್ಡಿಯವರು ಸಿಎಂ ಹಾಗೂ ಸಚಿವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಜನಾರ್ಧನ ರೆಡ್ಡಿಯವರು ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಜೈಲಿಗೆ ಹೋಗಿದ್ದು, ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣವಿನ್ನೂ ನಡೆಯುತ್ತಿದೆ. ಇವರಿಗೆ ಆರೋಪಿಸಲು ಯಾವುದೇ ನೈತಿಕ ಅಧಿಕಾರವಿಲ್ಲ. ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ನಿರತವಾಗಿದ್ದು, ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಜನವರಿ 22 ರಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದು, ಅಧಿವೇಶನದಲ್ಲಿ ವಿರೋಧಪಕ್ಷಗಳು ಚರ್ಚೆ ನಡೆಸಲಿ ಎಂದು ತಿಳಿಸಿದರು.

ಮಹಾರಾಷ್ಟ್ರ- ಕರ್ನಾಟಕ ರಾಜ್ಯದ ಗಡಿವಿವಾದ: ವಾದ ಮಂಡಿಸಲು ಸಿದ್ದ : ಮಹಾರಾಷ್ಟ್ರ- ಕರ್ನಾಟಕ ರಾಜ್ಯದ ಗಡಿವಿವಾದ ವಿಚಾರಣೆ ವಿಷಯ ಸುಪ್ರೀಂಕೋರ್ಟ್ ನ ಮುಂದೆ ಬರಲಿರುವ ಬಗ್ಗೆ ಉತ್ತರಿಸಿ, ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ಸಂಬಂಧ ಸಲ್ಲಿಸಿರುವ ಅರ್ಜಿಯ ವಿರುದ್ಧ ವಾದ ಮಂಡಿಸಲು ಕರ್ನಾಟಕ ಕಾನೂನು ತಂಡ ಸಿದ್ಧವಾಗಿದೆ. ರಾಜ್ಯದ ಗಡಿಯ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಮಹಾರಾಷ್ಟ್ರದ ಅಧಿಕಾರ ವ್ಯಾಪ್ತಿಗೆ ಬರುತ್ತದೆಯೇ ಎಂಬ ಬಗ್ಗೆಯೇ ನಮ್ಮ ಪ್ರಶ್ನೆಯಿದ್ದು, ಈ ವಿಚಾರ ಮೊದಲು ಇತ್ಯರ್ಥವಾಗಬೇಕು ಎಂದರು.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ : ಮಹಾನಗರ ಪಾಲಿಕೆ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕ ನಡೆಯುವ ಬೇಡಿಕೆ ಎದ್ದಿರುವ ಬಗ್ಗೆ ಉತ್ತರಿಸಿ, ಸ್ಥಳೀಯ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕವೇ ನಡೆಯಬೇಕೆಂಬುದು ನಮ್ಮ ಬೇಡಿಕೆಯೂ ಆಗಿದೆ ಎಂದರು.
ಒಳಮೀಸಲಾತಿ ವಿಧೇಯಕ : ಒಳಮೀಸಲಾತಿ ವಿಧೇಯಕವನ್ನು ರಾಜ್ಯಪಾಲರು ಹಿಂದಿರುಗಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಧೇಯಕದ ಸಂಬಂಧ ರಾಜ್ಯಪಾಲರು ಕೇಳಿರುವ ಪ್ರಶ್ನೆಗಳಿಗೆ ಸೂಕ್ತ ವಿವರಣೆಗಳನ್ನು ನೀಡಲಾಗುವುದು ಎಂದರು.
ವರಿಷ್ಠರಿಂದ ಕರೆಬಂದಾಗ ನವದೆಹಲಿಗೆ ಪ್ರಯಾಣ : ಮುಖ್ಯಮಂತ್ರಿಗಳು ನವದೆಹಲಿಗೆ ಭೇಟಿ ನೀಡುವ ಬಗ್ಗೆ ಉತ್ತರಿಸಿ, ಪಕ್ಷದ ವರಿಷ್ಠರಿಂದ ಭೇಟಿಗೆ ಕರೆಬಂದರೆ ನವದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.