ಚಿಕ್ಕಬಳ್ಳಾಪುರ: ಇರಾನ್ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಖಂಡಿಸಿ ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿ ಶಿಯಾ ಮುಸ್ಲಿಮರು ಅಘೋಷಿತ ಬಂದ್ ಆಚರಿಸುತ್ತಿದ್ದಾರೆ. ಇಂದು ಬೆಳಿಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು, ಅಮೆರಿಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಮೇನಿ ಅವರ ಫೋಟೊ ಹಿಡಿದು ಕಣ್ಣೀರು ಹಾಕಿದ ದೃಶ್ಯಗಳು ಕಂಡುಬಂದವು.
ಅಂಜುಮನ್ ಎ ಜಾಫರಿಯಾ ಸಮಿತಿ ನೇತೃತ್ವದಲ್ಲಿ ಮಧ್ಯಾಹ್ನ 3ಕ್ಕೆ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಲಾಗಿದೆ. ಜನರು ಈಗಾಗಲೇ ಗುಂಪು ಗೂಡುತ್ತಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿಯಾ ಮುಸ್ಲಿಮರ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ಖಮೇನಿ ಅವರ ನಿಧನ ದೊಡ್ಡ ಆಘಾತವನ್ನು ತಂದಿದೆ.
ಬೆಳ್ಳಿಕುಂಟೆ ಅಲೀಪುರವಾಯಿತು: ಹಳೆಯ ನಂಟು : ಅಲೀಪುರದ ಮೂಲ ಹೆಸರು ಬೆಳ್ಳಿಕುಂಟೆ. ಹಿಂದೆ ಬಿಜಾಪುರ ಆದಿಲ್ಶಾಹಿಗಳ ಅವಧಿಯಲ್ಲಿ ಅಲ್ಲಿನ ಜನರು ಇಲ್ಲಿಗೆ ವಲಸೆ ಬಂದರು. ಮುಸ್ಲಿಮರ ಸಂಖ್ಯೆ ಹೆಚ್ಚಿದಂತೆ ಬೆಳ್ಳುಕುಂಟೆ ಅಲೀಪುರವಾಗಿ ರೂಪಾಂತರವಾಯಿತು. ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆ ವ್ಯಾಪಾರ, ವಹಿವಾಟು, ಶಿಕ್ಷಣದ ಕಾರಣಕ್ಕೆ ಸಂಪರ್ಕ ಹೊಂದಿದ್ದಾರೆ. ಗ್ರಾಮದ ಪ್ರತಿ ಮನೆಯಲ್ಲೂ ಇರಾನ್ನೊಂದಿಗೆ ನೇರ ಸಂಪರ್ಕವಿದೆ ಎಂದು ಹೇಳಬಹುದು.
ಖಮೇನಿ ಅವರ 1986ರ ಐತಿಹಾಸಿಕ ಭೇಟಿ : ಅಯಾತೊಲ್ಲಾ ಅಲಿ ಖಮೇನಿ ಅವರು 1986ರಲ್ಲಿ, ಆಗ ಕೇವಲ ಪುಟ್ಟ ಹಳ್ಳಿ ಎನಿಸಿದ್ದ ಅಲೀಪುರಕ್ಕೆ ಭೇಟಿ ನೀಡಿದ್ದರು. ಅವರ ಭೇಟಿಯು ಗ್ರಾಮದ ಇತಿಹಾಸದಲ್ಲೇ ಮಹತ್ವದ ಘಟನೆಯಾಗಿತ್ತು. ಅವರ ಧಾರ್ಮಿಕ ದೇಶಗಳನ್ನು ಅಲೀಪುರದಲ್ಲಿ ಚಾಚೂತಪ್ಪಿಸದೆ ಪಾಲಿಸಲಾಗುತ್ತಿತ್ತು. ಅವರ ಬಗ್ಗೆ ಗ್ರಾಮಸ್ಥರಿಗೆ ಅಪಾರ ಗೌರವ ಮತ್ತು ಭಕ್ತಿ ಇತ್ತು.
‘ಅಲಿ ಟಿವಿ’: ಗ್ರಾಮದ ಪ್ರತ್ಯೇಕ ಕೇಬಲ್ ಚಾನಲ್ : ಗ್ರಾಮದಲ್ಲಿ ಅಂಜುಮನ್ ಜಾಫರಿಯಾ ಸಮಿತಿ ಪ್ರತ್ಯೇಕವಾದ ಕೇಬಲ್ ಚಾನಲ್ ಹೊಂದಿದೆ. ‘ಅಲಿ ಟಿವಿ’ ಹೆಸರಿನ ಈ ಚಾನಲ್ನಲ್ಲಿ ಮಸೀದಿಯ ಪ್ರಾರ್ಥನೆಗಳು, ಕುರ್ಆನ್ ಪಠಣ, ಧಾರ್ಮಿಕ ವಿಚಾರಗಳು ಪ್ರಸಾರವಾಗುತ್ತವೆ. ಈ ಚಾನಲ್ ಮೂಲಕವೇ ಗ್ರಾಮದ ಎಲ್ಲರಿಗೂ ಮಾಹಿತಿ ತಲುಪಿಸಲಾಗುತ್ತಿತ್ತು.