ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದ ಕರ್ನಾಟಕದ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೇಸಿಗೆಯ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆಯು ತಂಪೆರೆದಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಸೋಮವಾರ ಸಂಜೆಯ ಬಳಿಕ ರಾಜ್ಯದ ಪ್ರಮುಖ 11 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿ, ಕೊಪ್ಪಳ, ವಿಜಯಪುರ, ದಾವಣಗೆರೆ, ಬೀದರ್, ಚಿಕ್ಕಮಗಳೂರು, ಬಳ್ಳಾರಿ, ವಿಜಯನಗರ, ರಾಯಚೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಹಾಸನ ಜಿಲ್ಲೆಯಲ್ಲಿ ಯುಗಾದಿ ಹಬ್ಬಕ್ಕೂ ಮುನ್ನವೇ ಆಲಿಕಲ್ಲು ಸಹಿತ ಮಳೆಯಾಗಿದೆ. ಸಾಮಾನ್ಯವಾಗಿ ಯುಗಾದಿ ಹಬ್ಬದ ನಂತರ ಮಳೆಗಾಲ ಪ್ರಾರಂಭವಾಗುವುದು ವಾಡಿಕೆ. ಆದರೆ, ಈ ಬಾರಿ ಹಬ್ಬಕ್ಕೂ ಮೂರು ದಿನ ಮುಂಚಿತವಾಗಿ ಮಳೆ ಸುರಿದಿರುವುದು ರೈತರು ಹಾಗೂ ಜನಸಾಮಾನ್ಯರಲ್ಲಿ ಸಂತಸ ಮೂಡಿಸಿದೆ. ಕೃಷಿ ಚಟುವಟಿಕೆಗಳಿಗೆ ಈ ಮಳೆ ಅನುಕೂಲವಾಗಲಿದೆ.
ಮಲೆನಾಡು ಭಾಗದಲ್ಲಿಯೂ ಮಳೆಯ ಸಿಂಚನವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾನುವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದೆ. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಮಳೆ ಸುರಿಯಲಾರಂಭಿಸಿದೆ. ನರಸಿಂಹರಾಜಪುರ, ಕೊಪ್ಪ, ಕಳಸ ಭಾಗದಲ್ಲಿ ಭಾರಿ ಮಳೆಯಾಗಿದ್ದರೆ, ಶೃಂಗೇರಿಯಲ್ಲಿ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ, ಆಲ್ದೂರು ಹೋಬಳಿಯ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ನಗರ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ. ಇದರಿಂದ ಬಿಸಿಲಿನಿಂದ ಕಾದಿದ್ದ ಭೂಮಿ ತಂಪಾಗಿದೆ.
ಶಿವಮೊಗ್ಗದಲ್ಲಿಯೂ ಬೇಸಿಗೆ ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಭಾನುವಾರ ಸುರಿದ ಮುಂಗಾರು ಪೂರ್ವ ಮಳೆ ನೆಮ್ಮದಿ ನೀಡಿದೆ. ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮೊದಲ ಮಳೆಯಾಗಿದ್ದು, ವಾತಾವರಣ ತಂಪಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ, ಕಕ್ಕಬ್ಬೆ, ನೆಲಜಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಹಾಗೂ ಸೋಮವಾರ ಬೆಳಿಗ್ಗೆ ಮಳೆಯಾಗಿದ್ದು, ಸುಡುಬಿಸಿಲಿನಿಂದ ತತ್ತರಿಸಿದ ಜನರಿಗೆ ರಿಲೀಫ್ ಸಿಕ್ಕಿದೆ.
ವಿವಿಧ ನಗರಗಳ ತಾಪಮಾನ ವಿವರ
ಬೆಂಗಳೂರಿನಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ 35 ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಉಳಿದ ನಗರಗಳ ತಾಪಮಾನ (ಗರಿಷ್ಠ-ಕನಿಷ್ಠ ಡಿಗ್ರಿ ಸೆಲ್ಸಿಯಸ್ನಲ್ಲಿ):
- ಮಂಗಳೂರು: 31-24
- ಶಿವಮೊಗ್ಗ: 33-19
- ಬೆಳಗಾವಿ: 33-19
- ಮೈಸೂರು: 33-20
- ಮಂಡ್ಯ: 33-20
- ಮಡಿಕೇರಿ: 28-18
- ರಾಮನಗರ: 33-19
- ಹಾಸನ: 31-18
- ಚಾಮರಾಜನಗರ: 32-19
- ಚಿಕ್ಕಬಳ್ಳಾಪುರ: 32-19
- ಕೋಲಾರ: 32-19
- ತುಮಕೂರು: 32-19
- ಉಡುಪಿ: 31-24
- ಕಾರವಾರ: 29-25
- ಚಿಕ್ಕಮಗಳೂರು: 29-17
- ದಾವಣಗೆರೆ: 33-21
- ಹುಬ್ಬಳ್ಳಿ: 34-21
- ಚಿತ್ರದುರ್ಗ: 33-20
- ಹಾವೇರಿ: 34-21
- ಬಳ್ಳಾರಿ: 35-22
- ಗದಗ: 34-21
- ಕೊಪ್ಪಳ: 34-21
- ಯಾದಗಿರಿ: 34-23
- ವಿಜಯಪುರ: 34-22
- ಬೀದರ್: 33-21
- ಕಲಬುರಗಿ: 34-22
- ಬಾಗಲಕೋಟೆ: 34-22
FAQ (ಪದೇ ಪದೇ ಕೇಳಲಾಗುವ ಮಾಹಿತಿಗಳು)
- ರಾಜ್ಯದಲ್ಲಿ ಮಳೆಯಾಗಲು ಪ್ರಮುಖ ಕಾರಣ
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. - ಮಳೆಯ ಮುನ್ಸೂಚನೆ ಇರುವ 11 ಜಿಲ್ಲೆಗಳ ವಿವರ
ಕಲಬುರಗಿ, ಕೊಪ್ಪಳ, ವಿಜಯಪುರ, ದಾವಣಗೆರೆ, ಬೀದರ್, ಚಿಕ್ಕಮಗಳೂರು, ಬಳ್ಳಾರಿ, ವಿಜಯನಗರ, ರಾಯಚೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.