ಬೆಂಗಳೂರು: ಕರ್ನಾಟಕ ರಾಜ್ಯದ ಲಕ್ಷಾಂತರ ನಿವೃತ್ತ ಸರ್ಕಾರಿ ನೌಕರರು ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದ ಮಹತ್ವದ ಬೇಡಿಕೆಯೊಂದಕ್ಕೆ ರಾಜ್ಯ ಸರ್ಕಾರ ತಣ್ಣೀರೆರಚಿದೆ. ಪಿಂಚಣಿ ಪರಿವರ್ತಿತ ಮೊತ್ತದ (Commuted Pension) ಮರುಸ್ಥಾಪನೆ ಅವಧಿಯನ್ನು 15 ವರ್ಷಗಳಿಂದ 12 ವರ್ಷಕ್ಕೆ ಕಡಿತಗೊಳಿಸಬೇಕೆಂಬ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಅಧಿಕೃತವಾಗಿ ತಿರಸ್ಕರಿಸಿದೆ.
ನೌಕರರ ಬೇಡಿಕೆ ಏನಿತ್ತು : ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ಅನ್ವಯ, ನೌಕರರು ನಿವೃತ್ತಿಯ ವೇಳೆ ತಮ್ಮ ಪಿಂಚಣಿಯ ಒಂದು ಭಾಗವನ್ನು ಒಟ್ಟಿಗೆ (Lump sum) ಪಡೆಯಬಹುದು. ಹೀಗೆ ಮುಂಗಡವಾಗಿ ಪಡೆದ ಹಣವನ್ನು ಸರಿದೂಗಿಸಲು 15 ವರ್ಷಗಳ ಕಾಲ ಮಾಸಿಕ ಪಿಂಚಣಿಯಲ್ಲಿ ಕಡಿತ ಮಾಡಲಾಗುತ್ತದೆ. ಆದರೆ, “ಸರಳ ಬಡ್ಡಿಯ ಲೆಕ್ಕಾಚಾರದಲ್ಲಿ 12 ವರ್ಷಕ್ಕೇ ಅಸಲು-ಬಡ್ಡಿ ಪಾವತಿಯಾಗುತ್ತದೆ, ಆದ್ದರಿಂದ ಅವಧಿ ಕಡಿಮೆ ಮಾಡಿ” ಎಂದು ನೌಕರರ ಸಂಘಟನೆಗಳು ಒತ್ತಾಯಿಸಿದ್ದವು.






ಸರ್ಕಾರ ನೀಡಿದ 3 ಪ್ರಮುಖ ಕಾರಣಗಳು:
ಆರ್ಥಿಕ ಇಲಾಖೆಯು ಈ ಬೇಡಿಕೆಯನ್ನು ತಳ್ಳಿಹಾಕಲು ಈ ಕೆಳಗಿನ ತಾಂತ್ರಿಕ ಕಾರಣಗಳನ್ನು ನೀಡಿದೆ:
ನ್ಯಾಯಾಲಯದ ತೀರ್ಪು: 15 ವರ್ಷಗಳ ಅವಧಿಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿಹಿಡಿದಿದೆ.
ಸ್ವಯಂ ಒಪ್ಪಂದ: ನೌಕರರು ನಿಯಮಗಳನ್ನು ಒಪ್ಪಿಯೇ ಮುಂಗಡ ಹಣ ಪಡೆದಿರುತ್ತಾರೆ, ಹಾಗಾಗಿ ಮಧ್ಯದಲ್ಲಿ ಬದಲಾವಣೆ ಸಾಧ್ಯವಿಲ್ಲ.
ಆರ್ಥಿಕ ಹೊರೆ: ಅವಧಿ ಕಡಿತಗೊಳಿಸಿದರೆ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಲಿದೆ ಹಾಗೂ ಹಣದುಬ್ಬರದ ಅಪಾಯ ಸರ್ಕಾರಕ್ಕಿರುತ್ತದೆ.
ಖಜಾನೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ: ಈ ಕುರಿತು ಸರ್ಕಾರವು ಹೊಸ ಸುತ್ತೋಲೆ ಹೊರಡಿಸಿದ್ದು, ಯಾವುದೇ ಕಾರಣಕ್ಕೂ 15 ವರ್ಷಕ್ಕಿಂತ ಮುಂಚೆ ಪಿಂಚಣಿ ಮರುಸ್ಥಾಪಿಸಬಾರದು ಮತ್ತು ಈ ಸಂಬಂಧ ಬರುವ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಸೂಚಿಸಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಸಾವಿರಾರು ನಿವೃತ್ತ ನೌಕರರಿಗೆ ತೀವ್ರ ನಿರಾಸೆಯಾದಂತಾಗಿದೆ.