ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿದ್ದ ‘ಅಬಕಾರಿ ನೀತಿ’ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಶುಕ್ರವಾರ (ಫೆಬ್ರವರಿ 27, 2026) ದೊಡ್ಡ ರಿಲೀಫ್ ನೀಡಿದೆ. ಸಿಬಿಐ ಸಲ್ಲಿಸಿದ್ದ ಚಾರ್ಜ್ಶೀಟ್ ಅನ್ನು ಪರಿಗಣಿಸಲು ನಿರಾಕರಿಸಿದ ವಿಶೇಷ ನ್ಯಾಯಾಲಯವು, ಇಬ್ಬರೂ ನಾಯಕರನ್ನು ಪ್ರಕರಣದಿಂದ ಬಿಡುಗಡೆ (Discharge) ಮಾಡಿದೆ.
21 ಮಂದಿಗೆ ಕ್ಲೀನ್ ಚಿಟ್; ಕೆ. ಕವಿತಾ ಅವರಿಗೂ ಅನ್ವಯ : ಕೇವಲ ಕೇಜ್ರಿವಾಲ್ ಮತ್ತು ಸಿಸೋಡಿಯಾ ಮಾತ್ರವಲ್ಲದೆ, ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಸೇರಿದಂತೆ ಒಟ್ಟು 21 ಮಂದಿಗೆ ನ್ಯಾಯಾಲಯವು ಕ್ಲೀನ್ ಚಿಟ್ ನೀಡಿದೆ. ಇದು ಆಮ್ ಆದ್ಮಿ ಪಾರ್ಟಿ (AAP) ಮತ್ತು ಬಿಆರ್ಎಸ್ ನಾಯಕರಿಗೆ ಸಿಕ್ಕ ದೊಡ್ಡ ರಾಜಕೀಯ ವಿಜಯವೆಂದೇ ವಿಶ್ಲೇಷಿಸಲಾಗುತ್ತಿದೆ.
ಸಿಬಿಐ ತನಿಖೆಯಲ್ಲಿ ಲೋಪ: ನ್ಯಾಯಾಧೀಶರ ಗರಂ : ರೌಸ್ ಅವೆನ್ಯೂ ಕೋರ್ಟ್ನ ವಿಶೇಷ ನ್ಯಾಯಾಧೀಶರಾದ ಜಿತೇಂದ್ರ ಸಿಂಗ್ ಅವರು ತನಿಖಾ ಸಂಸ್ಥೆಯಾದ ಸಿಬಿಐ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಾಕ್ಷ್ಯಾಧಾರಗಳ ಕೊರತೆ: ಕೇಜ್ರಿವಾಲ್ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಮತ್ತು ಸಿಸೋಡಿಯಾ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಪ್ರಕರಣ ಕಂಡುಬರುತ್ತಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ತಪ್ಪು ಮಾಹಿತಿ: ಸಿಬಿಐ ಸಲ್ಲಿಸಿದ ಬೃಹತ್ ಚಾರ್ಜ್ಶೀಟ್ನಲ್ಲಿ ದಾರಿತಪ್ಪಿಸುವ ಅಂಶಗಳಿವೆ ಮತ್ತು ಸಾಕ್ಷಿಗಳ ಹೇಳಿಕೆಗಳಿಗೂ ಚಾರ್ಜ್ಶೀಟ್ಗೂ ತಾಳೆಯಾಗುತ್ತಿಲ್ಲ ಎಂದು ಕೋರ್ಟ್ ಹೇಳಿದೆ.
ಒಳಸಂಚಿನ ಥಿಯರಿ ಫೇಲ್: “ಈ ಚಾರ್ಜ್ಶೀಟ್ ತನ್ನಲ್ಲೇ ವೈರುಧ್ಯಗಳನ್ನು ಹೊಂದಿದೆ. ಇದು ಸಿಬಿಐ ರೂಪಿಸಿದ್ದ ಸಂಚಿನ ಸಿದ್ಧಾಂತದ ಬುಡಕ್ಕೇ ಪೆಟ್ಟು ನೀಡುತ್ತಿದೆ” ಎಂದು ಜಡ್ಜ್ ಸಿಂಗ್ ಗುಡುಗಿದ್ದಾರೆ.
‘ನಾವು ಕಟ್ಟರ್ ಇಮಾಂದಾರ್’: ಭಾವುಕರಾದ ಕೇಜ್ರಿವಾಲ್
ನ್ಯಾಯಾಲಯದ ತೀರ್ಪಿನ ಬಳಿಕ ಕೋರ್ಟ್ ಆವರಣದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಭಾವುಕರಾದರು.”ನಾನು ಭ್ರಷ್ಟನಲ್ಲ ಎಂದು ನ್ಯಾಯಾಲಯ ಇಂದು ಸಾಬೀತುಪಡಿಸಿದೆ. ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಎಎಪಿ ‘ಕಟ್ಟರ್ ಇಮಾಂದಾರ್’ (ಪರಮ ಪ್ರಾಮಾಣಿಕರು) ಎಂಬುದು ಸಾಬೀತಾಗಿದೆ. ಇದು ಸ್ವತಂತ್ರ ಭಾರತದ ಅತಿದೊಡ್ಡ ರಾಜಕೀಯ ಪಿತೂರಿ,” ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ಅವರು ಕಿಡಿಕಾರಿದರು.
ಮೇಲ್ಮನವಿ ಸಲ್ಲಿಸಲಿರುವ ಸಿಬಿಐ : ಟ್ರಯಲ್ ಕೋರ್ಟ್ನ ಈ ತೀರ್ಪಿನ ವಿರುದ್ಧ ಸಿಬಿಐ ಈಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ. “ನ್ಯಾಯಾಲಯವು ತನಿಖೆಯ ಹಲವು ಪ್ರಮುಖ ಅಂಶಗಳನ್ನು ಪರಿಗಣಿಸಿಲ್ಲ, ನಾವು ತಕ್ಷಣವೇ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ” ಎಂದು ಸಿಬಿಐ ಮೂಲಗಳು ತಿಳಿಸಿವೆ.