ಬೆಂಗಳೂರು: ‘ಕಾಂತಾರ ಚಾಪ್ಟರ್-1’ ಸಿನಿಮಾದ ಚಾವುಂಡಿ ದೈವದ ಪಾತ್ರವನ್ನು ಅನುಕರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
“ನೀವು ಒಬ್ಬ ದೈವದ ಬಗ್ಗೆ ಮಾತನಾಡುತ್ತಿದ್ದೀರಿ. ಅದರ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ, ಮೊದಲು ಅಭ್ಯಾಸ ಮಾಡಿ ಆಮೇಲೆ ಮಾತನಾಡಿ. (You should study and then speak) ದೈವವನ್ನು ‘ಹೆಣ್ಣು ದೆವ್ವ’ (Female Ghost) ಎಂದು ಕರೆಯುವುದು ಸರಿಯಲ್ಲ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂಟರ್ನೆಟ್ ಯಾವುದನ್ನೂ ಮರೆಯಲ್ಲ: “ನೀವು ಕ್ಷಮೆ ಕೇಳಿದರೆ ಆಡಿದ ಮಾತುಗಳು ವಾಪಸ್ ಬರುತ್ತವೆಯೇ? ಇಂಟರ್ನೆಟ್ ಯಾವುದನ್ನೂ ಮರೆಯುವುದಿಲ್ಲ” ಎಂದು ನ್ಯಾಯಾಧೀಶರು ರಣವೀರ್ ಸಿಂಗ್ ಪರ ವಕೀಲರಿಗೆ ಎಚ್ಚರಿಸಿದರು.
ನಟರಾದ ತಕ್ಷಣ ಏನು ಬೇಕಾದರೂ ಮಾತಾಡಬಾರದು: “ನೀವು ದೊಡ್ಡ ಸ್ಟಾರ್ ಇರಬಹುದು, ಆದರೆ ಒಂದು ಪ್ರದೇಶದ ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ. ನೀವು ಜನರ ಭಾವನೆಗೆ ನೋವುಂಟು ಮಾಡಿದ್ದೀರಿ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ನವೆಂಬರ್ 21, 2025 ರಂದು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI), ರಣವೀರ್ ಸಿಂಗ್ ಅವರು ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್-1’ ಚಿತ್ರದ ಚಾವುಂಡಿ ದೈವದ ಪಾತ್ರವನ್ನು ಅನುಕರಿಸಿದ್ದರು. ಈ ವೇಳೆ ದೈವವನ್ನು ಅಪಹಾಸ್ಯ ಮಾಡಲಾಗಿದೆ ಎಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಧ್ಯಂತರ ರಿಲೀಫ್: ಸದ್ಯಕ್ಕೆ ರಣವೀರ್ ಸಿಂಗ್ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿರುವ ಹೈಕೋರ್ಟ್, ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿದೆ.
‘Read first, then speak’: High Court slams Ranveer Singh for mocking God!