ನವದೆಹಲಿ: ಇಂದೂ ಸಿಗಲಿಲ್ಲ ನಟ ದರ್ಶನ್ಗೆ ಸುಪ್ರಿಂಕೋರ್ಟ್ನಿಂದ ಜಾಮೀನು, ಒಂದು ವರ್ಷ ಜೈಲೇ ಗತಿ ಯಾಗಿದೆ. ಸಾಕ್ಷ್ಯ ವಿಚಾರಣೆ ಮುಗಿಯಲು ಒಂದು ವರ್ಷದೊಳಗೆ ಪ್ರಮುಖ ಸಾಕ್ಷ್ಯ ವಿಚಾರಣೆ ಮಾಡಬೇಕು ಅಂತ ಕೆಳಹಂತದ ನ್ಯಾಯಾಲಯಕ್ಕೆ ಸುಪ್ರಿಂಕೋರ್ಟ್ ಆದೇಶ ನೀಡಿತು. ಇದರೊಂದಿಗೆ ದರ್ಶನ್ ಇನ್ನೂ ಒಂದು ವರ್ಷ ಜೈಲೇ ಗತಿಯಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ಅತ್ಯಂತ ಕುತೂಹಲಕಾರಿಯಾಗಿ ನಡೆಯಿತು. ತಮಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ನಟ ದರ್ಶನ್ ಸಲ್ಲಿಸಿರುವ ಈ ಮೇಲ್ಮನವಿ ಅರ್ಜಿಯು ಇಡೀ ರಾಜ್ಯದ ಗಮನ ಸೆಳೆದಿದ್ದು, ವಿಚಾರಣೆಯ ವೇಳೆ ಜೈಲಿನಲ್ಲಿ ತಾವು ಎದುರಿಸುತ್ತಿರುವ ನರಕಯಾತನೆಯನ್ನು ದರ್ಶನ್ ಅವರು ಸುಪ್ರೀಂ ಕೋರ್ಟ್ ಮುಂಭಾಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ತೀವ್ರ ತಾರತಮ್ಯ ಮಾಡಲಾಗುತ್ತಿದೆ ಮತ್ತು ತಮಗಾಗುತ್ತಿರುವ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದಾಗಿ ತಕ್ಷಣವೇ ತಮಗೆ ನ್ಯಾಯಾಲಯದಿಂದ ಪರಿಹಾರ ಸಿಗಬೇಕು ಎಂದು ಅವರು ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು.
ಸುಪ್ರೀಂ ಕೋರ್ಟ್ನಲ್ಲಿ ಇಂದು ನಡೆದ ಸುದೀರ್ಘ ವಿಚಾರಣೆಯ ವೇಳೆ ದರ್ಶನ್ ಪರ ವಕೀಲರು ಜೈಲು ಅಧಿಕಾರಿಗಳ ನಡೆ ಹಾಗೂ ಅಲ್ಲಿನ ವಾತಾವರಣದ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮುಂದಿಟ್ಟರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರನ್ನು ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳುತ್ತಿಲ್ಲ, ಬದಲಿಗೆ ಅವರ ವಿರುದ್ಧ ವ್ಯವಸ್ಥಿತ ತಾರತಮ್ಯ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ವಾದಿಸಲಾಯಿತು. ಪ್ರಮುಖವಾಗಿ ಜೈಲಿನಲ್ಲಿರುವ ಇತರ ಸಹ-ಕೈದಿಗಳಿಂದ ನಟ ದರ್ಶನ್ ಅವರಿಗೆ ನಿರಂತರವಾಗಿ ನಿಂದನೆ ಹಾಗೂ ಜೀವ ಬೆದರಿಕೆಗಳು ಬರುತ್ತಿವೆ. ಸಹ-ಕೈದಿಗಳು ದರ್ಶನ್ ಅವರನ್ನು ಕಂಡಾಗಲೆಲ್ಲ ಮೂದಲಿಸುವುದು, ಹೀಯಾಳಿಸುವುದು ಮತ್ತು ವಿವಿಧ ರೀತಿಯಲ್ಲಿ ಪ್ರಚೋದನೆ ನೀಡುವುದನ್ನು ದಿನನಿತ್ಯದ ಕೆಲಸ ಮಾಡಿಕೊಂಡಿದ್ದಾರೆ. ಇದರಿಂದಾಗಿ ಜೈಲಿನ ಒಳಗೆ ದರ್ಶನ್ ಅವರ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ ಮತ್ತು ಅವರು ತೀವ್ರ ಅಭದ್ರತೆಯ ಭಾವನೆಯಿಂದ ದಿನ ದೂಡುವಂತಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ದರ್ಶನ್ ಪರವಾಗಿ ರೋಹನ್ ರೋಹಟಗಿ ವಾದ ಮಂಡನೆ ಮಾಡಿದರು. ಇನ್ನೂ ಜೈಲಿನಲ್ಲಿ ದರ್ಶನ್ ಕುಟುಂಬದ ಜೊತೆಗೆ ಮಾತನಾಡಲು ಪೊಲೀಸರು ಮುಕ್ತವಾಗಿ ಮಾತನಾಡಲು ಬಿಡುತ್ತಿಲ್ಲ ಅಂತ ತಿಳಿಸಿದ್ದಾರೆ. ಇನ್ನೂ ದರ್ಶನ್ ಕ್ವಾರಂಟೈನ್ ಸೆಲ್ ನಲ್ಲಿ ಇಡಲಾಗಿದೆ ಅಂತ ನ್ಯಾಯಾಧೀಶರ ಮುಂದೆ ಇಟ್ಟಾಗ ನ್ಯಾಯಾಧೀಶರು ಯಾಕೆ ಇನ್ನೂ ಅವರನ್ನು ಇಡಲಾಗಿದೆ ಅಂತ ಪ್ರಶ್ನೆ ಮಾಡಿದರು.